ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟು
Category: ಶ್ರೀಕೃಷ್ಣ
Author: ಕನಕದಾಸ
ಬ್ರಹ್ಮ ಲಿಖಿತವ ಮೀರಿ ಬಾಳ್ವರುಂಟು
ನಿರ್ಮಳದಿ ವೈಷ್ಣವರ ಮನಮುಟ್ಟಿ ಭಜಿಸಿ ||ಪ||
ಪಾಪಕೆ ಹೇಸದ ಶಬರ ಬಟ್ಟೆಯನು ಕಾದಿರಲು
ಆ ಪಥದಿ ಸಲೆ ವೈಷ್ಣವನು ಬಂದು
ಪಾಪವನು ತಪ್ಪಿಸಿ ರಾಮನಾಮವ ಕೊಡಲು
ಕಾಪಥಕ ವಾಲ್ಮೀಕಿ ಮುನಿಯಾಗಲಿಲ್ಲವೆ? ||1||
ಪಂಚಮಹಾಪಾತಕವ ಮಾಡಿದ ಅಜಾಮಿಳನ
ವಂಚಿಸಿ ಯಮದೂತರೆಳೆದೊಯ್ಯುತಿರಲು
ಕಿಂಚಿತ್ತು ಹರಿನಾಮವನಾಕಸ್ಮಿಕದಿ ನೆನೆಯೆ
ಅಂಚಿಗೆಳೆದೊಯ್ದವರು ವಿಷ್ಣುದೂತರಲ್ಲವೆ? ||2||
ಬಾಲಕ ತನ್ನ ತಾಯ್ತಂದೆಯೊಳ್ ಮುನಿದು ಹಲವು
ಕಾಲ ವನದೊಳು ತಪವ ಮಾಡಲು
ನೀಲಮೇಘಶ್ಯಾಮ ಮೆಚ್ಚಿ ಬಾಲಕನಿಗೆ
ಮೇಲಾದ ಪದವಿಯನು ಕೊಡಲಿಲ್ಲವೆ? ||3||
ದಶಕಂಠನನುಜನು ಜಾನಕಿಯ ಬಿಡ ಹೇಳೆ
ಅಸುರ ಕೋಪವ ತಾಳಿ ಹೊರಗಟ್ಟಿದಾಗ
ಪೆಸರಗೊಳುತ ಬಂದು ಮೊರೆಹೊಕ್ಕ ವಿಭೀಷಣಗೆ
ಶಶಿರವಿ ಪರ್ಯಂತ ಪಟ್ಟಗಟ್ಟಲಿಲ್ಲವೆ? ||4||
ಕಲಿಗೆ ಬೆದರುವರಲ್ಲ ಕಾಲನ ಬಾಧೆಗಳಿಲ್ಲ
ಛಲದಿ ನರಳಿ ಪುಟ್ಟುವ ಗಸಣೆಯಿಲ್ಲ
ಒಲಿದು ಕಾಗಿನೆಲೆಯಾದಿಕೇಶವರಾಯನ
ಸಲೆ ನಂಬಿದವರಿಗೆ ಮುಕುತಿಯಿತ್ತುದಿಲ್ಲವೆ? ||5||