ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು
Category: ಶ್ರೀಕೃಷ್ಣ
Author: ಕನಕದಾಸ
ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು
ಮತ್ತೊಂದು ಚೋದ್ಯ ಕೇಳಿ
ಚಿತ್ರ ಹೂವಿನ ಹವಳ ಕಾಯಾಗುವ
ಅರ್ಥವ ತಿಳಿದು ಹೇಳಿ ||1||
ಸುಟ್ಟ ಬೀಜವ ಬಿತ್ತಿ ಬೆಳೆಯ ಬಾರದ ಕಾಯಿ
ಬೆಟ್ಟದಿ ಸಾರವನು
ತೊಟ್ಟು ಇಲ್ಲದ ಹಣ್ಣ ಮುಟ್ಟಿ ಕೊಯ್ವನು ಒಬ್ಬ
ಹುಟ್ಟು ಬಂಜೆಯ ಮಗನು ||2||
ಒಣಗಿದ್ದ ಮರನೇರಿ ಹಣ್ಣು ಕಾಯನು ಮಗನು
ದಣಿಯದೆ ಮೆದ್ದಿಳಿದ
ರಣದಲ್ಲಿ ತಲೆ ಹೊಯ್ದ ರುಂಡವು ಬೀಳಲು
ಹೆಣನೆದ್ದು ಕುಣಿದಾಡಿತು ||3||
ಕಣ್ಣಿಲ್ಲದಾತನು ಕಂಡು ಪಿಡಿದ ಮೃಗ
ಕೈಯಿಲ್ಲದಾತನೆಚ್ಚ
ಮಣ್ಣಲಿ ಹೊರಳುವ ಕಾಲಿಲ್ಲದಾತನು
ಗಣ್ಯವಿಲ್ಲದೆ ಪಿಡಿದ ||4||
ಎಲ್ಲರು ಕೇಳಿ ಕನಕ ಹೇಳಿದ ಮಾತ
ಎಲ್ಲರೂ ಗ್ರಹಿಸಿಕೊಳ್ಳಿ
ಬೆಳ್ಳಿ ಕಣ್ಣಿನವಗೆ ತಿಳಿಯಲಾರದ ಮಾತು
ಬಲ್ಲಾದಿಕೇಶವನು ||5||