ರಾಮಾನುಜ ಮತೋದ್ಧಾರಕ

Category: ಇತರೆ

Author: ಕನಕದಾಸ

ರಾಮಾನುಜ ಮತೋದ್ಧಾರಕ
ತಾಮಸಗುಣಪಾಶಗಿರಿವಜ್ರದಂಡ ||ಪ||

ವ್ಯಾಸರ ತೋಳೆಂದು ನಂದಿಯ ಧ್ವಜದಲ್ಲಿ
ಹೇಸದೆ ಕಟ್ಟಿ ಪೂಜಿಪರು ನೋಡ
ವ್ಯಾಸರದೊಂದು ತೋಳಿಗೆ ಶಿವಶರಣನ
ಸಾಸಿರ ತೋಳ್ಗಳ ತರಿದ ನಮ್ಮಯ್ಯ| |1||

ಹರಿ ಎಂಬ ಶಬ್ದವ ಕೇಳಿ ಪಿಟ್ಟಕ್ಕನು
ಹರನ ಹೊಟ್ಟೆಯಲ್ಲಿ ಪುಟ್ಟುವೆನೆಂಬಳು
ಹರಹರ ಎಂಬ ಶೈವರ ಏಳ್ನೂರು
ಶಿರಗಳನರಿದನು ನಮ್ಮ ತಾತಯ್ಯ||2||

ಮಸ್ತಕದೊಳು ರುದ್ರ ಪಾದದೊಳಗೆ ವಿಷ್ಣು
ಮಸ್ತಕ ಮಹಾದೇವ ಮೇಲೆಂಬರು
ಮಸ್ತಕ ಬಂದು ಪಾದಕೆ ಬಿದ್ದು ಶರಣೆಂಬ
ಮುಕ್ತಿಯ ಪಾದ ಮೇಲು ತಿಳಿದು ನೋಡಣ್ಣ ||3||

ಲಿಂಗವೆ ಘನವೆಂದು ಹೆಚ್ಚಿ ಕುಣಿದಾಡುವ
ಸಂಗನ ಶರಣರೆಲ್ಲರು ಕೇಳಿರಿ
ಲಿಂಗಪ್ರಸಾದವು ಮುಟ್ಟದಂತಾಯಿತು ನಮ್ಮ
ರಂಗನ ಪ್ರಸಾದವು ಲೋಕಪಾವನವು ||4||

ಧರೆಯೊಳು ವಿರಕ್ತರು ವೀರ ಪವಾಡವ
ಇರಿದು ಎಬ್ಬಿಸುವೆವೆಂದಾಡುವರು
ಹರಿಯ ನಾಮಾವಳಿಯ ಅನುಮಾನವಿಲ್ಲದೆಯೆ
ಧರಿಸಿದಲ್ಲದೆ ದೊರೆಯದು ಗತಿಯಣ್ಣ ||5||

ಹರಬಂದು ಓಂಕಾರ ಗುರುವೆ ಎನ್ನುತ ಕೃಷ್ಣ
ನರಮನೆಯ ಮುಂದೆ ಭಿಕ್ಷವ ಬೇಡಲು
ಹರಿಯುಂಡ ಮೇಲೆ ಪ್ರಸಾದವ ನೀಡಲು
ಹರ ಉಂಡು ಬ್ರಹ್ಮ ಹತ್ಯೆ ಕಳಕೊಂಡ ||6||

ಶಿವ ಮಹಾದೇವನು, ಧರೆಗೆ ಹರಿಯೆ ದೈವ
ಭುವನಕ್ಕೆ ಹರಿಹರರೇಕಸ್ಥರು
ಭವರೋಗ ಹರ ಕಾಗಿನೆಲೆಯಾದಿಕೇಶವನ
ವಿವರ ತಿಳಿದು ಭಜಿಸಿರೊ ಭಕ್ತ ಜನರು ||7||