ಸಾಧು ಸಜ್ಜನ ಸತ್ಯಗುಣಕಿದಿರುಂಟೆ

Category: ಶ್ರೀಕೃಷ್ಣ

Author: ಕನಕದಾಸ

ಸಾಧು ಸಜ್ಜನ ಸತ್ಯಗುಣಕಿದಿರುಂಟೆ
ಆದಿಕೇಶವನ ಪೋಲುವ ದೈವವುಂಟೆ ||ಪ||

ಸತ್ಯವ್ರತವುಳ್ಳವಗೆ ಮೃತ್ಯು ಭಯವುಂಟೆ
ಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆ
ವಿತ್ತವನರಸುವಂಗೆ ಮುಕ್ತಿಯೆಂಬುದುಂಟೆ
ಉತ್ತಮರ ಸಂಗಕಿಂತಧಿಕ ಧರ್ಮವುಂಟೆ ||1||

ಸುತಲಾಭಕಿಂತಧಿಕ ಲಾಭವುಂಟೆ
ಮತಿರಹಿತನೊಳು ಚತುರತೆಯುಂಟೆ
ಪತಿಸೇವೆಗಿಂತಧಿಕ ಸೇವೆಯುಂಟೆ
ಸತಿಯಿಲ್ಲದವಗೆ ಸಂಪದವೆಂಬುದುಂಟೆ ||2||

ಪಿಸುಣಗಿನ್ನಧಿಕ ಹೀನನುಂಟೆ
ವಸುಧೆಯೊಳನ್ನದಾನಕೆ ಸರಿಯುಂಟೆ
ಅಶನವ ತೊರೆದ ಯೋಗಿಗೆ ಭಯವುಂಟೆ
ವ್ಯಸನಿಯಾದ ನೃಪನಿಗೆ ಸುಖವುಂಟೆ ||3||

ಧನಲೋಭಿಗಿನ್ನಧಿಕ ಹೀನನುಂಟೆ
ಮನವಂಚಕ ಕಪಟಿಗೆ ನೀತಿಯುಂಟೆ
ಸನುಮಾನಿಸುವ ಒಡೆಯಗೆ ಬಡತನವುಂಟೆ
ವಿನಯವಾಗಿಹ ಸಂಗದೊಳು ಭಂಗವುಂಟೆ ||4||

ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆ
ಪರಮ ಸಾತ್ತ್ವಿಕ ಗುಣಕೆ ಪಿರಿದುಂಟೆ
ಪರನಿಂದೆಗಿಂತಧಿಕ ಪಾತಕವುಂಟೆ
ವರದಾದಿಕೇಶವನಲ್ಲದೆ ದೈವವುಂಟೆ ||5||