ಸಾಲದೆ ನಿನ್ನದೊಂದು ದಿವ್ಯನಾಮ

Category: ಶ್ರೀಕೃಷ್ಣ

Author: ಕನಕದಾಸ

ಸಾಲದೆ ನಿನ್ನದೊಂದು ದಿವ್ಯನಾಮ - ಅ
ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ

ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿ
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ ||1||

ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವ
ಸಂತತ ನೆತ್ತರನೊರಸಿ ಬಿಸುಟೆ
ತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲು
ಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ ||2||

ಕ್ಷೀಣ ದೇಹವ ಬಿಡುವೆನೆಂದು ಪಾಡಂಬಟ್ಟು
ತ್ರಾಣದಲಿ ಗರಳ ತೈಲವ ಸೇವಿಸೆ
ವೇಣುನಾದದಲಿ ಹಣೆಯನೇವರಿಸಿ
ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ ||3||

ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳು
ಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟು
ಹೆಮ್ಮಕ್ಕಳ ಬಾಧಿಸುವುದನು ಕಂಡು
ಬೊಮ್ಮಜಟ್ಟಿಗರ ಶಿರವರಿದೆ ನರಹರಿಯೆ ||4||

ಓದಿ ಹೇಳಿದರೊಂದು ಕಥೆಯಾಗುತಿದೆ ಮಹಾಂ
ಬೋಧಿಶಯನನೆ ವೇದಶಾಸ್ತ್ರ ಮುಖದಿ
ಬಾಧಿಸುವ ದುರಿತಾಗ್ನಿಗಂಬು
ಶ್ರೀ ಕಾಗಿನೆಲೆಯಾದಿಕೇಶವನ ನಾಮ ಸಂಕೀರ್ತನ ||5||