ಹೇಗಿದ್ದು ಹೇಗಾದೆಯೊ ಆತ್ಮ
Category: ವೈರಾಗ್ಯ
Author: ಕನಕದಾಸ
ಹೇಗಿದ್ದು ಹೇಗಾದೆಯೊ ಆತ್ಮ
ಯೋಗೀಶನಾನಂದಪುರದಲಿರುವುದ ಬಿಟ್ಟು ||ಪ||
ಬಸಿರ ಹಳ್ಳಿಗೆ ಬಂದು ಮಾಸನೂರಲಿ ನಿಂದು
ಕುಸುಕಾಡಿ ನುಡಿದು ನೆಲಬಟ್ಟೆವಿಡಿದು
ಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು
ವಸುಧೆಯಲಿ ದಿನಗಳೆದೆಯಲ್ಲ ಆತ್ಮ ||1||
ಎಳೆಗೆರೆಯಲಿ ಆಡಿ ಯೌವನದೂರಿಗೆ ಬಂದು
ಥಳಥಳಿಪ ಅಸ್ತಾದ್ರಿ ನೆಳಲ ಸೇರಿ
ಅಳಲು ಸುತ ಬೆಳೆದು ದಾರಿದ್ಯ್ರ ಪೇಟೆಗೆ ಬಂದು
ಹಳೆಯ ಬೀಡಿಗೆ ಪಯಣವೇ ಆತ್ಮ ||2||
ಗನ್ನಗತಕದ ಮಾತು ಇನ್ನು ನಿನಗೇತಕೋ
ಮುನ್ನ ಮಾಡಿದ ಕರ್ಮಭರದೊಡಲಿದೆ
ಉನ್ನತದ ಕಾಗಿನೆಲೆಯಾದಿಕೇಶವ ಸುಪ್ರ
ಸನ್ನ ಮೂರುತಿಯ ಭಜಿಸೆಲೊ ಆತ್ಮ ||3||