ಅಂತರಂಗದ ಕದವು ತೆರೆಯಿತಿಂದು

Category: ಶ್ರೀಕೃಷ್ಣ

Author: ವಿಜಯದಾಸ

ಅಂತರಂಗದ ಕದವು ತೆರೆಯಿತಿಂದು
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ
ಏಸುದಿನವಾಯಿತೊ ಬೀಗಮುದ್ರೆಯ ಮಾಡಿ |
ವಾಸವಾಗಿದ್ದರೋ ದುರುಳರಿಲ್ಲಿ ||
ಮೋಸವಾಯಿತು ಇಂದಿನ ತನಕ ತಮಸಿನ |
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||1||

ಹರಿಕರುಣವೆಂಬಂಥ ಕೀಲಿ ಕೈ ದೊರಕಿತು |
ಗುರುಕರುಣವೆಂಬಂಥ ಶಕ್ತಿಯಿಂದ ||
ಪರಮ ಭಾಗವತರ ಸಹವಾಸದಲಿ ಪೋಗಿ |
ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ||2||

ಸುತ್ತಲಿದ್ದವರೆಲ್ಲ ಪಲಾಯನವಾದರು |
ಭಕ್ತಿಕಕ್ಕಡವೆಂಬ ಜ್ಞಾನದೀಪ ||
ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ |
ಎತ್ತನೋಡಿದರತ್ತ ಶೃಂಗಾರಸದನ ||3||

ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು |
ಪರ ದಾರಿಗೆ ಪ್ರಾಣ ಜಯವಿಜಯರು ||
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ |
ಸರಸಿಜನಾಭನ ಅರಮನೆಯ ಸೊಬಗು|| 4||

ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ |
ರಮೆಧರೆಯರಿಂದಲಾಲಿಂಗಿತ್ವದಿ ||
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- |
ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ ||5||