ಅರ್ಚನೆ ಬಗೆ ಕೇಳಿ ಲೋಕ
Category: ಶ್ರೀಕೃಷ್ಣ
Author: ವಿಜಯದಾಸ
ಅರ್ಚನೆ ಬಗೆ ಕೇಳಿ ಲೋಕ
ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ
ಜಡವ ಪೂಜಿಸಿದರಲ್ಲೇನೊ ತಾನು |
ಜಡ ತುಲ್ಯ | ನಾಗಿದ್ದಕೆ ಸಮವೇನು ||
ಕೆಡದಿರು ಇದರೊಳಗೆ ನೀನು ತಿಳಿ |
ಒಡನೆ ಕರ್ಮಗಳೆಲ್ಲೇನುಂಟು ಕಾಣೋ ||1||
ಏಕಾಂತದಲಿ ನಿನ್ನ ಮನಸು ಅ |
ನೇಕವಾಗುವುದು ನಿರಂತರ ಗುಣಿಸು ||
ನೀ ಕೇಳು ಯೋಚಿಸಿ ಗಣಿಸು |
ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು ||2||
ತ್ರಿವಿಧ ಜೀವರು ಮಾಡುವಂಥ ನಡತಿ |
ಹವಣವ ನೋಡಿದು ಬಿಡು ನಿನ್ನ ಪಂಥ ||
ಕವಿಗಳೊಡನೆ ಸುಪಂಥದಿಂದ |
ಪವಮಾನಮತ ಪೊಂದಿ ಭಜಿಪುದು ಇಂಥ ||3||
ದ್ಯುಣುಕ ಪಿಡಿದು ಬಹುಕಾಲತನಕ |
ಎಣಿಕೆ ಮಾಡುತಲಿರು ನಿತ್ಯ ಸುಶೀಲ ||
ಗುಣವಂತನಾಗೊ ನೀ ಬಹುಳ ಸುಖ- |
ವನಧಿ ರಂಗನ ವ್ಯಾಪಾರವೆನ್ನೊ ಬಾಲ ||4||
ಆವಾಗ ಮರೆಯದಿರು ಹರಿಯ ಕಂಡ |
ಠಾವಿನಲಿ ಯೋಚಿಸು ಅರಗಳಿಗೆ ಬಯಸದಿರು ಸಿರಿಯ ||
ದೇವ ವಿಜಯವಿಠ್ಠಲ ದೊರೆಯ ನಿನ್ನ
ಭಾವದಲಿ ತಿಳಿಯೊ ಆತನ ಚರಿಯಾ ||5||