ಆರೇನು ಮಾಡುವರು ಅವನಿಯೊಳಗೆ

Category: ಶ್ರೀಕೃಷ್ಣ

Author: ವಿಜಯದಾಸ

ಆರೇನು ಮಾಡುವರು ಅವನಿಯೊಳಗೆ |
ಪೂರ್ವಜನ್ಮದ ಕರ್ಮ ಫಣಿಯಲ್ಲಿ ಬರೆದುದಕೆ

ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು |
ಕೂಡಿದ ಸತಿ ತನ್ನ ಕುಣಿಸ್ಯಾಡಲು ನಿಜದಿ ||
ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು |
ಆಡಿದ ಮತುಗಳು ಅಖಿಳಿರು ನಿಜವೆನಲು ||1||

ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ |
ತಲೆಗೆ ತನ್ನ ಕೈ ಪೆಟ್ಟು ತಾಕಿದರೆ ||
ಹೆರಳು ಹಾವಾದರೆ ಗೆಳೆಯ ರಿಪುವಾದರೆ |
ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ ||2||

ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ |
ಪೆತ್ತ ತಂದೆಯು ಹೊರಗೆ ಮಾಡಿದರೆ ||
ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ |
ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ ||3||

ಕಣ್ಣವೊಳಗಿನ ಗೊಂಬಿ ಕಾದ ಬಂದರೆ |
ಹೆಣ್ಣಿನ ಹರಟೆ ಹೆಚ್ಚಾದರೆ |
ಅನ್ನವನು ಉಣ್ಣಲು ಅಜೀರ್ಣವಾದರೆ |
ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ ||4||

ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ |
ವಾರಿಧಿಗಳು ಮೇರೆ ಮೀರಿದರೆ ||
ಆರಿದ ಇದ್ದಲಿಗಳು ಅಗ್ನಿಯಾದರೆ |
ನಮ್ಮ ವಿಜಯವಿಠ್ಠಲನಿರುವ ತನಕ ||5||