ಆವ ಜನ್ಮದ ಪುಣ್ಯ ಫಲಿಸಿತೆನಗೆ

Category: ಶ್ರೀಕೃಷ್ಣ

Author: ವಿಜಯದಾಸ

ಆವ ಜನ್ಮದ ಪುಣ್ಯ ಫಲಿಸಿತೆನಗೆ |
ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ

ಲವಣವನು ಸವಿದುಣಲು | ಬಲುಜನ್ಮದಲಿ ಯಿದ್ದ
ಭವರಾಸಿಗಳು ಹಾರಿ ಬಯಲಾದವು|
ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ |
ನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ||1||

ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ |
ಶೋಕವನೆ ಬಂದಿರಲು ಬೆನ್ನು ಬಟ್ಟು |
ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು |
ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ ||2||

ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ |
ಆಪತ್ತು ಕಳವಳಿಸಿ ಹಿಂದಾದವು |
ಭಾಪುರೆ ಮೋಕ್ಷಮಾರ್ಗಕ್ಕೆ
ಸೋಪಾನ ದೊರಕಿದವು ಏನೆಂಬೆ
ಸೋಜಿಗವು ಬಲು ತೀವ್ರದಲಿ ||3||

ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ |
ಅಕ್ಷಯವಾಗುವದು ಇದ್ದ ಪುಣ್ಯ |
ಅಕ್ಷರ ವಂಚನಾಗಿ ಸರ್ವದಾ ಮೋಕ್ಷಸಾಧನ
ಮಾಳ್ಪ ಮನಸು ಪುಟ್ಟಿತು ನೋಡಾ||4||

ಓದನವು ಉದರದಲಿ ತುಂಬಲಾಕ್ಷಣದಲ್ಲಿ |
ಸಾಧುಗಳ ಸಂಗತಿ ಘಟಿಸುವದು | ಭೇದಾರ್ಥ
ಜ್ಞಾನ ಬಂದೊದಗುವದು ಗುರು ಪೂರ್ಣ |
ಬೋಧರಾ ಮತದಲ್ಲಿ ಲೋಲಾಡುವಾನಂದಾ ||5||

ಘೃತ ದಧಿ ತಕ್ರ ಮೊದಲಾದ ವ್ಯಂಜನ ಉಣಲು |
ಹಿತವಾಗಿ ಸಕಲ ಇಂದ್ರಿಯಂಗಳು |
ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ |
ರತಿಪತಿಪಿತನ ಪದಸೇವೆಯೊಳಗಿಪ್ಪವೊ ||6||

ಕೃಷ್ಣ ಸಂದರುಶನ ಮೃಷ್ಟಾನ ಭೋಜನ |
ಕಷ್ಟನಾಶನ ಸರ್ವ ಕರ್ಮಕಧಿಕಾ |
ಇಷ್ಟ ಸುಖ ಸೌಖ್ಯಕರ ಮತ್ತಾವಲ್ಲಿ ಕಾಣೆ |
ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ ||7||