ಆವ ತಾ ಸುಖವೊ ಮತ್ತಾವನಂದವೊ
Category: ಶ್ರೀಕೃಷ್ಣ
Author: ವಿಜಯದಾಸ
ಆವ ತಾ ಸುಖವೊ ಮತ್ತಾವನಂದವೊ |
ಈ ಉಡುಪಿ ಯಾತ್ರಿ ಮಾಡಿದ ಮನುಜಗೆ
ಮನದೊಳಪೇಕ್ಷಿಸೆ ಅವನೀಗ ಹದಿನಾಲ್ಕು |
ಮನುಗಳು ಭೂಮಿ ಆಳುವ ತನಕಾ |
ಕನಕ ರಜತಪೀಠ ಗೋಕುಲದಿಂದ | ಸ |
ಜ್ಬನ ಮಾರ್ಗದಲ್ಲಿ ಗುಣವಂತ ನೆನೆಸುವ ||1||
ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ |
ಅಂದೆ ಸುರರೊಳು ಗಣನೆ ಎನ್ನಿ |
ಒಂದಕ್ಕೆ ನೂರಾರು ಯಾಗ ಮಾಡಿದ ಫಲ |
ತಂದು ಕೊಡುವ ಅಜನಾದಿ ಕಲ್ಪ ಪರಿಯಂತ||2||
ಅರ್ಧ ಮಾರ್ಗವು ಬರಲು ಬಂದೆ ದಿವಸದಲ್ಲಿ |
ಸಾಧರ್ ತ್ರಿಕೋಟಿ ದೇವತೆಗಳಲಿ |
ಊಧ್ರ್ವರೇತಸನಾಗಿ ಮಿಂದ ಫಲವಕ್ಕು |
ಮೂರ್ಧಾಭಿಷಕ್ತನು ಬ್ರಹ್ಮಾಯ ಪರಿಯಂತ ||3||
ಕ್ಷೇತ್ರದ ಬಳಿಗಾಗಿ ಬರಲು ಅವನ ಏಳು |
ಗೋತ್ರ ನೂರೊಂದು ಕುಲದವರು |
ಗಾತ್ರವ ಮರೆದು ರೋಮಾಂಚನದಿಂದಲಿ |
ಪಾತ್ರವನಾಡೋರು ಮೋಕ್ಷಮಾರ್ಗವ ಸಾರಿ||4||
ಸನ್ನಿಧಿಗೆ ಬಂದು ಕರವ ಜೋಡಿಸಿ ನಿಂದು |
ಸನ್ನುತಿಸಿ ದರ್ಶನ ಮಾಡಲು |
ತನ್ನ ಕರವ ತಿಳಿದು ಜ್ಞಾನ ಭಕುತಿ ಸಂ |
ಪನ್ನ ವಿರುಕುತಿಲಿ ಗತಿಗಭಿಮುಖನಾಹ ||5||
ಮಧ್ವ ಸರೋವರದಲ್ಲಿ ಸ್ನಾನವಗೈದು |
ಸಿದ್ಧಾಂತ ಕರ್ಮಗಳನನುಸರಿಸೀ |
ಶುದ್ಧಾತ್ಮ ಕೃಷ್ಣನ ದೇವಾಲಯವ ಸಾರೆ |
ಪೊದ್ದಿದಾ ಸತ್ಯಲೋಕದ ಸಭೆಯೊಳಗೆ ||6||
ಕೃಷ್ಣ ಕೃಷ್ಣ ಯೆಂದು | ನವ ವಿಧ ಪೂಜೆಯನ್ನು |
ದೃಷ್ಟಿಯಿಂದಲಿ ನೋಡೆ ಅವನೆ ಮುಕ್ತಾ |
ಮುಟ್ಟಿ ಪೂಜಿಸುವರ ಸತ್ಪುಣ್ಯ ವಿಜಯ |
ವಿಠ್ಠಲ ತಾ ಬಲ್ಲ ನರರೆಣಿಸಲಳವಲ್ಲಾ ||7||