ಈತನೀಗ ಪ್ರಣವ ಪಾದ್ಯನೊ

Category: ಶ್ರೀಕೃಷ್ಣ

Author: ವಿಜಯದಾಸ

ಈತನೀಗ ಪ್ರಣವ ಪಾದ್ಯನೊ |
ಭೂತ ಪ್ರೇತ ಪ್ರಮಥ ತತಿಗೆ |
ನಾಥನೆನಿಪ ನಮಗೆ ನಿರುತ |
ವಾಕನೊಳಗೆ ಹರಿಯ ತೋರುವ

ಗಜದನುಜ ವಿನಾಶನೀತ |
ಗಜವದನನ ಪೆತ್ತನೀತ |
ಗಜನ ಸದದನೀತ ಪೆತ್ತಂ |
ಗಜನ ಗೆದ್ದ ಗಂಭೀರನೀತ |
ಗಜರಿಪುರಥ ರಮಣನೀತಾ ನಂ |
ಗಜಮಾರಗೊಲಿದನೀತ |
ಗಜ ವರದನ ಭಕ್ತರಘವೆಂಬೊ |
ಗಜಕೆ ಕೇಸರಿಯಾಗಿಪ್ಪನೀತಾ ||1||

ದ್ವಿಜರಾಜ ಜುಟನೀತಸೋತ್ತಮ |
ದ್ವಿಜಗೆ ಪಾಲಿಪನೀತ ಸತತಾ |
ದ್ವಿಜ ಪನ್ನಗನ್ನ ಸಮಗುಣನೀತಾ |
ದ್ವಿಜ ಕುಲದಲ್ಲಿ ಉದ್ಭವನೀತ |
ದ್ವಿಜನ ಶಾಪವ ಕೈಕೊಂಡನೀತ |
ದ್ವಿಜ ಭೂಷಣ ಯಾಗದಲಿ ಸೂರ್ಯನ |
ಧ್ವಜವ ಕಿತ್ತಿದನೀತ ಕೈಲಾಸ |
ದ್ವಿಜವಾಗಿವುಳ್ಳ ಉಗ್ರೇಶನೀತ||2||

ತ್ರಿಗುಣಾಕಾರ ನೀತ ಮೂರು |
ಜಗವದಲ್ಲಣನೀತ ಮೇರು |
ನಗಚಾಪನೀತ ನಾರಾಯಣಾಸ್ತ್ರದಿ |
ನಗರನುರುಪಿ ಬಿಟ್ಟನೀತ |
ಬಗೆಬಗೆಯ ಜೀವಿಗಳಿಗೆ ಬಿಡದೆ |
ಅಗಣಿತ ಭೋಗ ಪ್ರದಾತನೀತ |
ಮೃಗಲಾಂಛನದ ಮೊಗನಗೆ ಈತ |
ನಿಗಮಾಶ್ರವದಗಧಿಕನೀತಾ ||3||

ಭಸುವ ರಾವಣ ಮಾಗಧ ಕಶ್ಯಪ |
ಅಸುರಗಣಕೆ ವರವಿತ್ತನೀತ |
ಪಶುವದನ ಪರಮೇಶ್ವರನೀತ |
ವಿಷವ ಭಂಜನಭವ ಶಿವನೀತ |
ಬಿಸಿಜ ಸಂಭವ ನಂದನನೀತ |
ಅಸಮವೀರ ವೈಷ್ಣವನೀತ |
ವಸುಧಿಯೊಳಗೆ ಶರಣ ಜನಕೆ |
ವಶವಾಗಿಯಿಪ್ಪ ಉಗ್ರೇಶನೀತಾ ||4||

ಹೇಮಕೂಟಾದ್ರಿ ನಿಲಯನೀತ |
ರಾಮದೇವ ವಾಸವಂದ್ಯ |
ಸೋಮವರ್ಣನೀತ ಸಕಲ |
ಕಾಮಿತಾರ್ಥವ ಕೊಡುವನೀತ |
ಯಾಮ ಯಾಮಕೆ ಮನದೊಳು ನಿಂದು |
ಕ್ಷೇಮ ಮಾರ್ಗಕ್ಕೆ ಪ್ರೇರಕನೀತ |
ರಾಮ ವಿಜಯವಿಠ್ಠಲನಂಘ್ರಿ |
ನಾಮನೆನಿಸಿ ಕೊಂಡಾಡುವನೀತಾ||5||