ಕೃಷ್ಣವೇಣಿ ಕಲ್ಯಾಣಿ

Category: ಶ್ರೀದೇವಿ

Author: ವಿಜಯದಾಸ

ಕೃಷ್ಣವೇಣಿ ಕಲ್ಯಾಣಿ
ಕಷ್ಟ ಪರಿಹರಿಪೆ ನಿತ್ಯ ಸಾಗರನ ರಾಣಿ

ಅಜನ ನಿರೂಪದಲಿ ಜಾಬಾಲಿಮುನಿ ಬಂದು
ಭಜಿಸಿದನು ನಿನ್ನ ಬಲುದಿವಸಂಗಳು
ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ
ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ ||1||

ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ
ಹನ್ನೆರಡು ವರುಷಕೆ ಒಮ್ಮೆ ಬಿಡದೇ
ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ
ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ ||2||

ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು
ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ
ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ
ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ ||3||

ಪೋಗದ ಪಾಪಗಳಿರಲು ನಿನ್ನ ದರುಶನವು
ಆಗುತ್ತ ಓಡಿದವು ನೆಲೆಗಾಣದೆ
ಬಾಗಿ ನಮೋ ನಮೋಯೆಂಬ ಭಾಗವತರ ಮನೆಯ
ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ ||4||

ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು
ಒಲಿದು ಕೊಂಡಾಡುವರು ಸತತದಲ್ಲಿ
ಜಲನಿಧಿಯ ಎರಡು ಮೊಗದಲಿ ಮೆರೆದೆ
ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ ||5||