ಕೊಂಡಾಡಲಳವೆ ಕಪಿಕುಲೋತ್ತಮ

Category: ಶ್ರೀಹನುಮಂತ

Author: ವಿಜಯದಾಸ

ಕೊಂಡಾಡಲಳವೆ ಕಪಿಕುಲೋತ್ತಮ
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ
ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು
ವೊದಗಿ ಮಂದರ ಶೈಲ ತವಕದಿ ತಂದಾಗ
ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು
ಮುದದಿಂದ ಕಟಿಯಲು ಮುನಿದು ಮಹರೋಷದಿ
ಉದಧಿಯೊಳು ವಿಷ ಹೊರಡಲು
ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು
ಉದರದೊಳು ತಾಳಿದಿ ಸುರರು ಸುಖಬಡಲು ||1||

ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ
ಭೂತಳಾಧಿಪ ರಾಮಚಂದ್ರನ ಪದವಾರಿ
ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ
ಆತುರದಲಿ ಪುರಹೂತನಂದನ ನಿ
ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ
ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ-
ಮಾತುಲಿಯನು ಕಿತ್ತಿಟ್ಟು ಅಕ್ಷನ ಕೊಂದು
ವಾತಹತಮಾಡಿ ಲಂಕಾಪುರವ ಸುಟ್ಟ ||2||

ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ
ಮಂಡಲದೊಳು ಮಹಾಶೂರನೆನಿಸಿ ವಿಷ
ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು
ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ
ಹಿಂಡಿ ಬಕಾಸುರನ ಖಂಡರಿಸಿ ಕೀಚಕನ
ಮಂಡಲದೊಳಗೆ ನಿಂದೆ ವಿರಾಟನ್ನ
ಕೊಂಡೊಯ್ಯೆ ಬಿಡಿಸಿ ತಂದೆ ಕುರು ನೃಪನ
ದಿಂಡುಗೆಡುಹಿ ಕದನದಲಿ ವೇಗ ಕೊಂದೆ ||3||

ಮಧ್ವಾವತಾರವ ಮಾಡಿ ದುರ್ಮತದಿಂದ
ಬುದ್ಧಿಹೀನರಾಗಿ ಬಾಳಿದ ಮನುಷ್ಯರ
ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ
ಮುದ್ರೆಧಾರಣ ಕೊಟ್ಟು e್ಞÁನಾಂಬುಧಿಯೊಳಿಟ್ಟು
ಅದ್ವೈತ ಮತ ಕಾಲಿಲೊದ್ದು ಪರವಾದಿ
ಎದ್ದೋಡಿ ಬಂದು ತಿರುಗಿ ನಿಮ್ಮ
ಪದ್ಮಪಲ್ಲವಕ್ಕೆರಗಿ ಬೇಡಿಕೊಳ್ಳಲು
ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ||4||

ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ
ವಾಯು ಹನುಮ ಭೀಮ ಮಧ್ವನೆಂದಿನಿಸಿದೆ
ಕಾಯಜ ಜನಕನ ಪದವ ಪೂಜಿಸಿ ಅಂಬು
ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ
ನಾಯಕನೆನಿಸಿದೆ ನಾನಾ ದುರಿತವಾಗಿ
ಮಾಯಿಗಳೆಲ್ಲ ತರಿದೆ ಸುಭಕುತರ
ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ||5||