ಗುರು ವಾದಿರಾಜ ಯತಿಯಾ

Category: ಇತರೆ

Author: ವಿಜಯದಾಸ

ಗುರು ವಾದಿರಾಜ ಯತಿಯಾ ನೆನಸುವದು
ನಿರುತ ಕರುಣಿಪ ಮತಿಯಾ

ಆರ್ತನಾ ಸರಿದಾರು ನವನ
ವರ್ತಮಾನವನೆ ಕೇಳಿ
ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ ||1||

ದುರಿತ ರಾಶಿಗಳ ಶೀಳಿ ಹೊರದೆಗೆದು
ಮರುತ ಶಾಸ್ತ್ರವನೆ ಪೇಳಿ
ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ
ಧರಿಯೊಳಗೆ ಮೆರೆದೆ ಧೀರ ||2||

ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ
ನಂದ ಸತ್ಕೀರ್ತಿ ಭೂಪ
ವಂದಿಸಿದವರಿಗೆ ಲೇಸಾಗಿ ಕೊಡುವ ಮು
ಕುಂದನಂಘ್ರಿಯ ದಾಸ ||3||

ತೀರ್ಥಯಾತ್ರೆಯನೆ ಮಾಡಿ
ಹರಿ ಭೇದಾರ್ಥದಿಂದಲೆ ಕೊಂಡಾಡಿ
ಅರ್ಥಾಸೆಗಳ ಈಡಾಡಿ
ಹಯಮೊಗನ ಅರ್ಥಿಯಿಂದಲಿ ಪೂಜಿಪ||4||

ತ್ರಿಜಗದೊಳಗಿನವರಿಗೆ ಎಣೆಗಾಣೆ
ಕುಜನ ಮತ ಸೋಲಿಸುವಲ್ಲಿ
ವಿಜಯವಿಠ್ಠಲನೆ ದೈವವೆಂದು
ಧ್ವಜವೆತ್ತಿ ತಿರುಗಿದ ಮುನಿಪ ||5||