ಚಿಂತೆಯಾತಕೆ ನಿನಗೆ ಎಲೆ

Category: ಶ್ರೀಕೃಷ್ಣ

Author: ವಿಜಯದಾಸ

ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ |
ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು

ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ |
ಲಾಭವಲ್ಲದ ಇದು ನೋಡುವದಕೆ
ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ
ವೈಭೋಗವಲ್ಲೆನೆಂದರೆ ಬಿಡದು ರಮಣೀ ||1||

ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ
ಸ್ತರ ಪುಣ್ಯ ಬಂದು ಈ ಪರಿ ಸೌಖ್ಯವ
ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು
ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ ||2||

ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ
ಚಾರಮಾಡದೆ ತಂದು ಹೃದಯಮಧ್ಯ
ಸೇರಿಸುವಂದದಿ ಎನಗೆ ಇಲ್ಲಿಹ್ಯುದು ಸಂ
ಸಾರದೊಳಗಿದ್ದ ಸುಖವಿನಿತುಂಟು ರಮಣೀ ||3||

ಸಂತಾನವಿಲ್ಲೆಂದು ಈರ್ವರೂ ಚಿಂತಿಪದ್ಯಾಕೆ
ಪಿಂತೆ ಕಾಂತಾರದಲಿ ಬಾಲಮೃಗನ
ಅಂತಕನ ಪುರಿಗೆ ಅಟ್ಟಿದ ದೋಷದಿಂದ ನಮ-
ಗಿಂತು ತೋರಿತು ಗುಟ್ಟು ಪೇಳಬಾರದು ರಮಣೀ ||4||

ಈ ಜನ್ಮ ಬಂದದಕೆ ಇನ್ನಾದರೆಚ್ಚೆತ್ತು
ಮಾಜಿಕೊಂಡಿದ್ದು ಜನರಂತೆ ನಡದು
ಮೂಜಗತ್ಪತಿ ಸಿರಿ ವಿಜಯವಿಠ್ಠಲನ ಸ
ರೋಜ ಚರಣವನು ಪೂಜಿಸುವೆನು ರಮಣೀ ||5||